ನಾಡಕಛೇರಿಯಲ್ಲಿ ಇರಬೇಕಾದ ಆರ್ಐ ಖಾಸಗಿ ಕಟ್ಟಡದಲ್ಲಿ!
1 min read
ನಾಡಕಛೇರಿಯಲ್ಲಿ ಇರಬೇಕಾದ ಆರ್ಐ ಖಾಸಗಿ ಕಟ್ಟಡದಲ್ಲಿ!
ಅಧಿಕಾರಿಗಳ ಭ್ರಷ್ಟತೆ ಬಗ್ಗೆ ಶಾಸಕ ಧೀರಜ್ ಮುನಿರಾಜು ಬೇಸರ
ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ ಶಾಸಕ ಧೀರಜ್ ಮುನಿರಾಜು, ಕಂದಾಯ ಇಲಾಖೆ ಅಧಿಕಾರಿಗಳು ಜನರಿಗೆ ಸಿಗುತ್ತಿಲ್ಲ, ನಾಡಕಛೇರಿಯಲ್ಲಿ ಇರಬೇಕಾದ ಆರ್ಐ ಗಳು ಖಾಸಗಿ ಕಟ್ಟಡಗಳಲ್ಲಿ ಕಚೇರಿ ಮಾಡಿಕೊಂಡಿದ್ದಾರೆ, ವಿಎಗಳಿಗೆ ಇಬ್ಬಿಬ್ರು ಸಹಾಯಕರಿದ್ದಾರೆ, ಕಂದಾಯ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡುವುದಾಗಿ ಶಾಸಕರು ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಇಂದು ಕೆಡಿಪಿ ಸಭೆ ನಡೆಯಿತು, ಈ ವೇಳೆ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ಮೊನ್ನೆಯಷ್ಟೆ ದೊಡ್ಡಬಳ್ಳಾಪುರ ತಾಲೂಕು ಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಒಂದು ದಿನ ಸಾಲದು, ದಾಖಲೆಗಳನ್ನ ತಿದ್ದಿದ್ದಾರೆ, ಮೂಲ ಕಡತಗಳನ್ನೇ ಕಣ್ಮರೆ ಮಾಡಿದ್ದಾರೆ ಎಂದರು.
ಕಂದಾಯ ಸಚಿವ ಕೃಷ್ಣಬೈರೇಗೌಡರು ಸರ್ಕಾರಿ ಅಸ್ತಿಗಳನ್ನ ಉಳಿಸಲು ಉತ್ತಮ ಕೆಲಸ ಮಾಡುತ್ತಿದ್ದಾರೆ, ಸರ್ಕಾರಿ ಆಸ್ತಿಗಳನ್ನ ಉಳಿಸಲು ತಾವೂ ಸಾಥ್ ನೀಡುವೆ. ಆದರೆ ಮೊದಲು ಅಧಿಕಾರಿಗಳು ಜನರಿಗೆ ಸಿಗುವಂತಾಗ ಬೇಕು, ಆಗ ಮಾತ್ರ ಜನರ ಸಮಸ್ಯೆಗಳು ಬಗೆಹರಿಯುವುದು, ಅಧಿಕಾರಿಗಳು ಕೇವಲ ಬ್ರೋಕರಿಂಗ್ ಕೆಲಸ ಮಾಡಿದ್ರೆ ಹೇಗೆ, ಇದು ಕೇವಲ ದೊಡ್ಡಬಳ್ಳಾಪುರದ ಸಮಸ್ಯೆಯಲ್ಲ, ಇಡೀ ರಾಜ್ಯದಲ್ಲಿದೆ. ಎಸಿ ಮತ್ತು ತಹಶೀಲ್ದಾರ್ರನ್ನ ಸರಿ ಮಾಡಬಹುದು,ಆದರೆ ಇಡೀ ಆಫೀಸ್ ಸರಿ ಮಾಡಲು ಬೇರೆಯದ್ದೇ ತಂತ್ರಗಾರಿಕೆ ಮಾಡಬೇಕು ಎಂದರು.
ಅಧಿಕಾರಿಗಳ ಜೊತೆ ಸಭೆ ಮಾಡಲು ತಾಲೂಕಿನ ಜನತೆ ನನಗೆ ಅರ್ಶಿವಾದ ಮಾಡಿದ್ದಾರೆ, ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂಬುದು ನನ್ನ ಆಸೆ, ಆ ಪ್ರಯತ್ನವನ್ನ ನಾನು ಪ್ರಾಮಾಣಿಕವಾಗಿ ಮಾಡುತ್ತಿರುವೆ ಎಂದರು. ಭ್ರಷ್ಟಾಚಾರದಿಂದ ಬೇಸತ್ತಿರುವ ನಾವು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ವ್ಯವಸ್ಥೆ ಇದೆ. ಅಧಿಕಾರಿಗಳ ವಿರುದ್ಧ ಚಾಟಿ ಬೀಸಲು ನಾನು ಕಾಯುತ್ತಿರುವೆ, ಕಂದಾಯ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಲ್ಲಿ ದಾಖಲೆ ಸಮೇತ ನನಗೆ ಮಾಹಿತಿ ನೀಡಿ ಅವರು ವಿರುದ್ಧ ನಾನು ಕ್ರಮ ತೆಗೆದು ಕೊಳ್ಳುವೆ ಹಾಗೆಯೇ ನಿಮ್ಮ ಕೆಲಸ ಮಾಡಿಸುವ ಜವಾಬ್ಧಾರಿ ನನ್ನದು ಎಂದರು.