ಆಯುಧಪೂಜೆಗೆ ಬೆಲೆ ಏರಿಕೆ ಬಿಸಿ: ಬರದ ಎಫೆಕ್ಟ್ ಚಿಕ್ಕಬಳ್ಳಾಪುರದಲ್ಲಿ ಗಗನಕ್ಕೇರಿದ ಹೂವಿನ ಬೆಲೆ
1 min read
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಆಯುಧ ಪೂಜೆ-ವಿಜಯದಶಮಿ ಸಂಭ್ರಮಕ್ಕೆ ಬರದ ಗರ ಬಡಿದಿರುವ ಜತೆಗೆ, ಹಬ್ಬ ಆಚರಣೆಗೆ ಹೂವು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿದೆ.
ಜಿಲ್ಲೆಯ ಎಲ್ಲ ತಾಲೂಕುಗಳ ಮಾರುಕಟ್ಟೆಗಳಲ್ಲಿ ಬಾಳೆ ಕಂಬ ಹಾಗೂ ಬೂದು ಕುಂಬಳವನ್ನು ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ ಬೆಲೆ ಏರಿಕೆಯ ಬಿಸಿಯಿಂದ ಜನರು ಅಳೆದು ತೂಗಿ ಖರೀದಿ ಮಾಡುವಂತಾಗಿದೆ. ನಗರದ ಬಿ.ಬಿ ರಸ್ತೆ, ಸಂತೆ ಮಾರುಕಟ್ಟೆ, ಬಜಾರ್ ರಸ್ತೆ, ಎಂ.ಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಕಳೆದ 3-4 ದಿನಗಳಿಂದ ಖರೀದಿ ನಡೆಯುತ್ತಿದೆ. ಅಬ್ಬರದ ಖರೀದಿ ಇಲ್ಲದೆ ವ್ಯಾಪಾರಿಗಳು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ಎಲ್ಲವೂ ದುಬಾರಿ:
ಆಯುಧ ಪೂಜೆ ಮತ್ತು ವಿಜಯದಶಮಿ ಪ್ರತಿಯೊಬ್ಬರೂ ಆಚರಣೆ ಮಾಡುವ ಹಬ್ಬ. ಎಲ್ಲಅಂಗಡಿಗಳು, ಮನೆ, ದೇಗುಲ ಹೀಗೆ ಎಲ್ಲೆಡೆ ಸಡಗರ ಮನೆ ಮಾಡಿರುತ್ತದೆ. ವಾಹನ, ಆಯುಧಗಳು, ಯಂತ್ರೋಪಕರಣ, ದೇವರ ಉತ್ಸವಗಳು ನಡೆಯುತ್ತವೆ. ಹೂವಿನ ಅಲಂಕಾರವೇ ಈ ಹಬ್ಬದ ವಿಶೇಷ. ಹೀಗಾಗಿ ಕಳೆದ ಕೆಲವು ದಿನಗಳಿಂದ ಪಾತಾಳಕ್ಕೆ ಕುಸಿದಿದ್ದ ಹೂವಿನ ಬೆಲೆ, ಈಗ ಗಗನಕ್ಕೇರಿದೆ. ಇನ್ನೊಂದೆಡೆ ಹಣ್ಣು ಮತ್ತು ತರಕಾರಿಗಳ ಬೆಲೆಯೂ ದುಬಾರಿಯಾಗಿದೆ.