ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಿನಾಮೆಗೆ ಆಗ್ರಹ
1 min read
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜಿನಾಮೆಗೆ ಆಗ್ರಹ
ಬಾಗೇಪಲ್ಲಿಯಲ್ಲಿ ದಲಿತ ಹಕ್ಕು ಸಮಿತಿಯಿಂದ ಪ್ರತಿಭಟನೆ
ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜಿನಾಮೆ ಪಡೆದು, ಕೂಡಲೇ ಗಡಿಪಾರು ಮಾಡಬೇಕು ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಕಾರ್ಯದರ್ಶಿ ಚೆಂಚುರಾಯನಪಲ್ಲಿ ಕೃಷ್ಣಪ್ಪ ಆಗ್ರಹಿಸಿದರು.
ಡಿಎಚ್ಎಸ್ ನೇತೃತ್ವದಲ್ಲಿ ಬಾಗೇಪಲ್ಲಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಮುಂದೆ ಕೇಂದ್ರ ಗೃಹ ಸಚಿವರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಚೆಂಚುರಾಯನಪಲ್ಲಿ ಕೃಷ್ಣಪ್ಪ, ಅಂಬೇಡ್ಕರ್ ಅವರನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಸಂಸತ್ತಿನಲ್ಲೆ ಕೇಂದ್ರ ಗೃಹ ಸಚಿವರು ಅವಮಾನಿಸಿದ್ದಾರೆ. ಸಂವಿಧಾನ ನೀಡಿದ ಮಹಾಜ್ಞಾನಿಯನ್ನು ಅವಮಾನಿಸಿದ್ದು, ದೇಶದ ಬಹು ಸಂಖ್ಯಾತರನ್ನೊಳಗೊ0ಡ ಪ್ರಜಾಪ್ರಭುತ್ವವನ್ನೆ ಅವಮಾನಿಸಿದ್ದಾರೆ ಎಂದರು.
ಸ0ವಿಧಾನದ ಆಶಯಗಳನ್ನು ಮಣ್ಣುಪಾಲು ಮಾಡಿ, ಆರ್ಎಸ್ಎಸ್, ಬಿಜೆಪಿ ಮನುವಾದವನ್ನು ದೇಶದ ಮೇಲೆ ಹೇರಲು ಹೊರಟಿದ್ದಾರೆ. ಈ ಬಿಜೆಪಿ ಸರಕಾರ ಬಂದಾಗಲಿ0ದ ದೇಶದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿವೆ. ಜಾತಿ ತಾರತಮ್ಯ, ಧರ್ಮಾಂದತೆ ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅಮಿತ್ ಶಾರವರನ್ನು ಗೃಹ ಸಚಿವರ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು, ಗಡಿಪಾರು ಮಾಡಿ,ಈ ಪ್ರಕರಣದ ಕುರಿತು ತನಿಖೆ ಮಾಡಬೇಕೆಂದು ಒತ್ತಾಯಿಸಿದರು.
ಡಿಎಚ್ಎಸ್ ಜಿಲ್ಲಾಧ್ಯಕ್ಷ ಬಿಳ್ಳೂರು ಕೆ.ನಾಗರಾಜ್ ಮಾತನಾಡಿ, ದೇಶದಲ್ಲಿ ಕಟ್ಟುಪಾಡುಗಳನ್ನು ಶತಮಾನಗಳಿಂದಲೂ ಅನುಸರಿಸಿಕೊಂಡು ಬರಲಾಗುತ್ತಿತ್ತು. ಈ ಕಟ್ಟು ಪಾಡುಗಳಿಂದ ಮೇಲು, ಕೀಳೆಂಬ ತಾರತಮ್ಯಗಳು ಹೆಚ್ಚಾಗಿದ್ದವು. ಆದರೆ ಅಂತಹ ಎಲ್ಲವನ್ನು ತೊಡೆದು ಹಾಕಿ, ದೇಶದ ಎಲ್ಲ ವರ್ಗಗಳ ಜನತೆಗೆ ನ್ಯಾಯ ದೊರಕಿಸಲು ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ ಎಂದರು. ಈ ವೇಳೆ ಡಿಎಚ್ಎಸ್ ಜಿಲ್ಲಾ ಕಾರ್ಯದರ್ಶಿ ಕೆ. ಮುನಿಯಪ್ಪ, ತಾಲೂಕು ಅಧ್ಯಕ್ಷ ಆಗಟಿಮಡಕ ಕೃಷ್ಣಪ್ಪ, ವಾಲ್ಮೀಕಿ ಅಶ್ವತ್ಥಪ್ಪ, ಚನ್ನರಾಯಪ್ಪ, ಚಿನ್ನಪ್ಪಯ್ಯ, ರಾಮಾಂಜಿ ಇದ್ದರು.